ಸರ್ವಜಿತು


ಕೆರೆ ತುಂಬಿ ಹಳ್ಳಕಾಲುವೆಗಳಲಿ ನೀರೋಡಿ
ಮೇಡು ಬನ ಬಯಲು ಬಾಳೆಲ್ಲ ಹಚ್ಚಗೆ ಹಾಡಿ
ಗಿಡಬಳ್ಳಿ ಹೂಮುಡಿದು ಹೆಣ್ಣ ಹೊರೆಯಲಿ ಬಳಲಿ
ಶಾಂತಿಯಲಿ ನಾಡು ನಗಲಿ !
ಗುಡ್ಡ ಗುಡಿಗೋಪುರದ ಗಂಟೆಗಳ ಹಿರಿದನಿಗೆ
ಒಲಿದು ಕೈ ಮುಗಿದು ನಾಡೆಲ್ಲ ತಿಳಿಬಾನೆದೆಗೆ
ಹರಕೆಯನು ಹೊರಲಿ, ಸಂತೋಷ ತನ್ನೊಳಗುಡಿಗೆ
ನುಗ್ಗಿಬರಲೆಂದು ಬೆಳಕಾಗಿ !
ಸರ್ವಜಿತು ಸಕಲ ಲೋಕದ ಚರಾಚರ ಜೀವ
ವರ್ಗವರ್ಗಾಂತರಗಳೆಲ್ಲ ಸೋದರಭಾವ
ಸೌಖ್ಯಸಂತೃಪ್ತಿ ಧೀರೋತ್ಸಾಹಮಾರ್ಗದಲಿ
ಹೆಜ್ಜೆಯಿಡಲೆಂದು, ಸ್ವರ್ಗದ ಕನಸು ಭೂಮಿಯಲಿ
ತುಂಬಿಕೊಳಲೆಂದು ಹರಸಲಿ ! ತನ್ನ ಕಾಲದಲಿ
ಉನ್ನತಿಗೆ ನಾಡ ನಡಸಲಿ !

           - ಕೆ ಎಸ್ ನರಸಿಂಹಸ್ವಾಮಿ
('ಉಂಗುರ' ಕವನ ಸಂಕಲನದಿಂದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....