ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?


ಯಾವ  ಕಾಲದ  ಶಾಸ್ತ್ರವೇನು ಹೇಳಿದರೇನು ?
ಎದೆಯ  ದನಿಗೂ  ಮಿಗಿಲು  ಶಾಸ್ತ್ರವಿಹುದೇನು ?
ಎಂದೋ  ಮನು  ಬರೆದಿಟ್ಟುದಿಂದೆಮಗೆ  ಕಟ್ಟೇನು ?
ನಿನ್ನೆದೆಯ  ದನಿಯೆ ಋಷಿ ! ಮನು ನಿನಗೆ ನೀನು !

ನೀರಡಿಸಿ ಬಂದ  ಸೋದರಗೆ ನೀರನು ಕೊಡಲು 
ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?
ನೊಂದವರ  ಕಂಬನಿಯನೊರಸಿ  ಸಂತೈಸುವೊಡೆ 
ಶಾಸ್ತ್ರ  ಪ್ರಮಾಣವದಕಿರಲೆ  ಬೇಕೇನು ?

ಪಂಚಮರ  ಶಿಶುವೊಂದು  ಕೆರೆಯಲ್ಲಿ  ಮುಳುಗುತಿರೆ 
ದಡದಲ್ಲಿ  ಮಿಯುತ್ತ  ನಿಂತಿರುವ  ನಾನು 
ಮುಟ್ಟಿದರೆ  ಬ್ರಹ್ಮತ್ವ   ಕೆಟ್ಟುಹೋಗುವುದೆಂದು 
ಸುಮ್ಮನಿದ್ದರೆ  ಶಾಸ್ತ್ರಸಮ್ಮತವದೇನು?

ಅಂತು  ಮನು  ತಾನು  ಹೆಲಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ  ಸುತ್ತಿ,
ಸ್ವರ್ಗ  ಹೋಗಲಿ, ಮತ್ತೆ ನರಕ  ಬಂದರು ಬರಲಿ,
ಎದೆಯ  ಧೈರ್ಯವ  ಮಾಡಿ ಬಿಸುಡಾಚೆಗೆತ್ತಿ!

ಸ್ವರ್ಗ  ಹೋಗುವುದಿಲ್ಲ, ನರಕ  ಬರುವುದು ಇಲ್ಲ;
ಸ್ವರ್ಗ  ನರಕಗಳೇನು  ಶಾಸ್ತ್ರಸ್ಥವಲ್ಲ .
ಎದೆಯ  ದನಿ  ಧರ್ಮನಿಧಿ ! ಕರ್ತವ್ಯವದುವೆ  ವಿಧಿ !
ನಂಬದನು; ಅದನುಳಿದು  ಋಷಿಯು  ಬೇರಿಲ್ಲ!

ಹಿಂದಿನಾ  ಋಷಿಗಳೂ  ಮಾನವರೆ  ನಮ್ಮಂತೆ,
ಅವರ  ಶಾಸ್ತ್ರವು  ಅವರ  ಕಾಲಕ್ಕೆ  ಮಾತ್ರ;
ಕಾಲಕ್ಕೆ  ತಕ್ಕಂತೆ, ದೇಶಕ್ಕೆ  ತಕ್ಕಂತೆ,
ನಮ್ಮ  ಹೃದಯವೆ  ನಮೆಗೆ  ಶ್ರೀಧರ್ಮಸೂತ್ರ  !


                                                 - ಕುವೆಂಪು 
                 ( 'ಕೋಗಿಲೆ  ಮತ್ತು  ಸೋವಿಯಟ್  ರಷ್ಯ' ಕವನಸಂಕಲನದಿಂದ )

4 ಕಾಮೆಂಟ್‌ಗಳು:

  1. Sahitya prakatisiruvudakke dhanyavadagalu.

    La akshara sari maadi in "Heliralara"

    ಪ್ರತ್ಯುತ್ತರಅಳಿಸಿ
  2. ಎಂತಾ ಅದ್ಭುತದವಾದ ಸಾಲುಗಳು.... ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ವೇಕ್ತಿಯು ಈ ಸಾಲುಗಳನ್ನು ಅರ್ಥ ಮಾಡ್ಕೊಂಡ್ರೆ ಸಾಕು ಜೀವನ ಸುಗಮವಾಗಿ ಸಾಗುವುದರ ಜೊತೆಗೆ ಸಮಾಜ ಕೂಡ ಒಳ್ಳೆಯರಿತಿಯಲ್ಲಿ ಇರುತ್ತೆ...
    ಜೀವನದ ಸತ್ಯತೆಯನ್ನು ತಿಳಿಸುವ ಸಾಲುಗಳು 🙏

    ಪ್ರತ್ಯುತ್ತರಅಳಿಸಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....