ಕವಿತೆ


ಬಿಡುವು ಒಂದೇ ಸಾಕೆ ಪದ್ಯ ಬರೆಯುವುದಕ್ಕೆ
ಅದಕೆ ಕಾಗದ ಬೇಕು, ಕಪ್ಪುಮಸಿಯೂ ಬೇಕು.
ಭಾವಗಳು ತಾವಾಗಿ ಲೇಖನಿಗಿಳಿಯಬೇಕು
ಹೃತ್ಕಮಲದಿಂದ. ಬಾಳಿನ ನೋವು ನಲಿವುಗಳು
ಮಾತಿಗೆ ಒಲಿಯಬೇಕು. ಚೆಲುವು ಒಲವುಗಳು
ತಾನಾಗಿ ಅರಳಿರಬೇಕು. ದುಃಖ ಸೇತುವೆಯ
ದಾಟಿದ ಒಳದನಿಯ ಆಹ್ವಾನವೂ ಕವಿಗೆ
ಇರಬೇಕು. ನಡುಹೊಳೆಯಲ್ಲಿ ಬಂಡೆಯ ಮೇಲೆ
ಹಿಂದೊಮ್ಮೆ ಸ್ವಪ್ನದಲಿ ಕಂಡ ರಾಜಕುಮಾರಿ
ವೀಣೆಯನು ಮಿಡಿಯುತ್ತ ಹಾಡುತ್ತಲಿರಬೇಕು.
ಛಂದಸ್ಸು ಇರಬೇಕು ಕುದುರೆಗಳ ನಡೆಯಂತೆ.
ಕವಿತೆ ಆಲೋಚನಾಮೃತ; ರಸಿಕರೆದೆಯಲ್ಲಿ
ಹುಣ್ಣಿಮೆಯ ಹೊಂಬೆಳಕು; ಹನಿಯಲ್ಲಿ ಒಂದು ಹೊಳೆ.
ಕವಿತೆ ಮೂಡುವ ತನಕ ನಾವು ಕಾದಿರಬೇಕು.

                                 - ಕೆ ಎಸ್ ನರಸಿಂಹಸ್ವಾಮಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....