ಕವಿ - ವೇದಾಂತಿ


ವೇದಾಂತಿ ಹೇಳಿದನು:
     ಹೊನ್ನೆಲ್ಲ ಮಣ್ಣು;
ಕವಿಯೊಬ್ಬ ಹಾಡಿದನು:
     ಮಣ್ಣೆಲ್ಲ ಹೊನ್ನು!

ವೇದಾಂತಿ ಹೇಳಿದನು:
     ಈ ಹೆಣ್ಣು ಮಾಯೆ;
ಕವಿಯು ಕನವರಿಸಿದನು:
     ಓ ಇವಳೇ ಚೆಲುವೆ
ಇವಳ ಜೊತೆಯಲಿ ನಾನು
     ಸ್ವರ್ಗವನೆ ಗೆಲುವೆ!
   
ವೇದಾಂತಿ ಹೇಳಿದನು:
     ಈ ಬದುಕು ಶೂನ್ಯ;
ಕವಿ ನಿಂತು ಸಾರಿದನು:
     ಇದು ಅಲ್ಲ ಅನ್ಯ,
ಜನ್ಮ ಜನ್ಮದಿ ಸವಿದೆ
     ನಾನೆಷ್ಟು ಧನ್ಯ!

                 -  ಜಿ ಎಸ್ ಶಿವರುದ್ರಪ್ಪ
         ('ಕಾರ್ತೀಕ' ಕವನ ಸಂಕಲನದಿಂದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....