ಜೋಗದ ಝೊಕ್

 
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದರೊಳಗೆ ನೋಡು ಒಮ್ಮೆ ಜೋಗದ ಗುಂಡಿ.

ತಾಳಗುಪ್ಪಿ ತಾರಕವೆಂಬ ಬೊಂಬಾಯ್ ಮಠ
ಸಾಲಗುಡ್ಡದ ಮ್ಯಾಲೆ ನೋಟಕ ಭಟ್ಕಳ್ ಮಠ
ದಾರಿ ಕಡಿದು ಮಾಡಿದರೆ ಗುಡ್ಡ ಬೆಟ್ಟ
ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ.

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು
ಭೂಮಿತಾಯಿ ಮುಡಿದು ನಿಂತಾಳ್ ಬಾಸಿಂಗ್ ಜೋಡು
ಬಾಣಾವತಿ ಬೆಡಗಿನಿಂದ ಬರ್ತಾಳೆ ನೋಡು.

ಅಂಕು ಡೊಂಕು ವಂಕಿ ಮುರಿ ರಸ್ತೆದಾರಿ
ಹತ್ತಿ ಇಳಿದು ಸುತ್ತಿದಂಗೆ ಹಾವಿನ ಮರಿ
ತೊಟ್ಟಿಲ ಜೀಕಿ ಆಡಿದ್ಹಾಂಗೆ ಮನಸಿನ ಲಹರಿ
ನಡೆಯುತದೆ ಮೈಸೂರೊಳಗೆ ದರಂದುರಿ.

ಹೆಸರು ಮರ್ತಿ ಶರಾವತಿ ಅದೇನ್ ಕಷ್ಟ
ಕಡೆದ ಕಲ್ಲ ಕಂಬದ ಮ್ಯಾಲೆ ಪೂಲಿನಕಟ್ಟ
ಎಷ್ಟು ಮಂದಿ ಎದೆಯ ಮುರಿದು ಪಡುತಾರ್ ಕಷ್ಟ
ಸಣ್ಣದರಿಂದ ದೊಡ್ಡದಾಗಿ ಕಾಣೋದ್ ಬೆಟ್ಟ.

ಬುತ್ತಿ ಉಣುತಿದ್ರುಣ್ಣು ಇಲ್ಲಿ ಸೊಂಪಾಗಿದೆ
ಸೊಂಪು ಇದಪು ಸೇರಿ ಮನಸು ಕಂಪಾಗ್ತದೆ
ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ
ತಂಪಿನೊಳಗೆ ಮತ್ತೊಂದೇನೋ ಕಾಣಸ್ತದೆ.

ಅಡ್ಡ ಬದಿ ಒಡ್ಡು ನಲಿಸಿ ನೀರಿನ ಮಿತಿ
ಇದರ ಒಳಗೆ ಇನ್ನು ಒಂದು ಹುನ್ನಾರೈತಿ
ನೀರ ಕೆಡವಿ ರಾಟೆ ತಿರುವಿ ಮಿಂಚಿನ ಶಕ್ತಿ
ನಾಡಿಗೆಲ್ಲ ಕೊಡ್ತಾರಂತೆ ದೀಪದ ತಂತಿ.

ಊಟ ಮುಗಿದಿದ್ರೇಳು ಮುಂದೆ ನೋಡೋದದೆ
ನೋಡುತ್ತಿದ್ರೆ ಬುದ್ಧಿ ಕೆಟ್ಟು ಹುಚ್ಚಾಗ್ತದೆ
ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದಿದೆ
ಉಳಿಯೋದಾದ್ರೆ ಮಹರಾಜ್ರ ಬಂಗ್ಲೆ ಅದೆ.

ನೋಡು ಗೆಳೆಯ ಜೋಕೆ ಮಾತ್ರ ಪಾತಾಳ ಗುಂಡಿ
ಹಿಂದಕೆ ಸರಿದು ನಿಲ್ಲು ತುಸು ಕೈತಪ್ಪಿಕೊಂಡಿ
ಕೈಗಳಳ್ತಿ ಕಾಣಸ್ತದೆ ಬೊಂಬಾಯ್ ದಂಡೀ
ನಮ್ಮದಂದ್ರೆ ಹೆಮ್ಮೆಯಲ್ಲ ಜೋಗದ ಗುಂಡೀ.

ಶಿಸ್ತುಗಾರ ಶಿವಪ್ಪನಾಯ್ಕ ಕೆಳದಿಯ ನಗರ
ಚಿಕ್ಕದೇವ ದೊಡ್ಡದೇವ ಮೈಸೂರಿನವರ
ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀರಾಮರ
ಎಲ್ಲ ಕಥೆ ಹೇಳುತದೆ ಕಲ್ಪಾಂತರ.

ರಾಜ ರಾಕೆಟ್ ರೋರರ್ ಲೇಡಿ ಚತುರ್ಮುಖ
ಜೋಡಿಗೂಡಿ ಹಾಡಿತಾವೆ ಹಿಂದಿನ ಸುಖ
ತಾನು ಬಿದ್ರೆ ಆದೀತೆಳು ತಾಯಿಗೆ ಬೆಳಕ
ಮುಂದಿನವರು ಕಂಡರೆ ಸಾಕು ಸ್ವಂತ ಸುಖ.

ಒಂದು ಎರಡು ಮೂರು ನಾಲ್ಕು ಆದಾವ್ ಮತ
ಹಿಂದಿನಿಂದ ಹರಿದು ಬಂದದ್ದೊಂದೇ ಮತ
ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ
ಮುಂದೆ ಹೋಗಿ ಸೇರುವಲ್ಲಿಗೊಂದೇ ಮತ.

ಷಹಜಹಾನ ತಾಜಮಹಲು ಕೊಹಿನೂರ್ ಮಣಿ
ಸಾವಿರಿದ್ರು ಸಲ್ಲವಿದಕೆ ಚೆಲುವಿನ ಕಣಿ
ಜೀವವಂತ ಶರಾವತಿಗಿನ್ನಾವ್ದೆಣಿ
ಹೊಟ್ಟೆಕಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣೆ.

ಶರಾವತೀ ಕನ್ನಡ ನಾಡ ಭಾಗೀರಥಿ
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತೀ
ಸಾವು ನೋವು ಸುಳಿಯದಿಲ್ಲಿಯ ಕರಾಮತಿ
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ.

                            - ಮೂಗೂರು ಮಲ್ಲಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....